ಕನ್ನಡದ ನುಡಿವೆಣ್ಣು ಕಬ್ಬದುಡಿಗೆಯ ತೊಟ್ಟು
ಗಂಭೀರ ಗಮನದಲ್ಲಿ ಪಂಡಿತರ ಕೋಲೂರಿ
ರಾಜವೈಖರಿಯಲ್ಲಿ ಮಂದ ಹೆಜ್ಜೆಗಳಿಟ್ಟು
ಪಾಮರರ ಕಡೆಗಣಿಸಿ ಆಕಾಶಕುಸುಮಗಳ
ಕಂಪನಾಘ್ರಾಣಿಸುತ ಕಲ್ಪವೃಕ್ಷದ ಹಣ್ಣ
ಸವಿಸೊದೆಯ ಸೊಗಕೆಂದು ಬಾಯಿಚಪ್ಪರಿಸುತ್ತ
ಸಗ್ಗಗಭಿಮುಖವಾಗಿ ಪಯಣ ಹೊರಟಿರುವಾಗ
ಆಕೆಯನೆ ಕೆಣಕಿದಿರಿ ಗಳಗನಾಥರೆ ! ನೀವು.
ಉಭಯಭಾಷಾ ಪ್ರೌಢಸಾಮ್ರಾಜ್ಞತಾನಿಂದು
ರನ್ನ ಪೀಠವ ತೊರೆದು ಸಾಮಾನ್ಯರೆದೆಯಲ್ಲಿ
ಸಲೆ ಮೆರೆದು ನಿಂತಿಹುದ ನಿಚ್ಚಳದಿ ಕಂಡಾಗ
ನಿಮ್ಮ ಸೇವೆಯ ಮರೆದು ಬಾಳುವನೆ ಕನ್ನಡಿಗ?
ನಿಮ್ಮ ಗದ್ಯದ ಶೈಲಿ ಕನ್ನಡದ ಜನಕಿತ್ತ
ದಿವ್ಯ ಕಾಣಿಕೆಯಾಯ್ತು; ಹೆಸರು ಶಾಸನವಾಯ್ತು.
ಕನ್ನಡ ಕಾದಂಬರಿ ಪಿತಾಮಹ ಗಳಗನಾಥ (ವೆಂಕಟೇಶ ತಿರಕೋಕುಲಕರ್ಣಿ) ಅವರನ್ನು ಕುರಿತು ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರು 1946ರ ಮಾರ್ಚ್ 15ರಂದು ಬರೆದಿದ್ದ ಕವಿತೆ ’ಗಳಗನಾಥರಿಗೆ’. ಈ ಕವಿತೆಯು ಧಾರವಾಡದ ವಿದ್ಯಾವರ್ಧಕ ಸಂಘವು ಪ್ರಕಟಿಸಿದ್ದ (1945) ’ಗಳಗನಾಥ’ ಪುಸ್ತಕದಲ್ಲಿ ಪ್ರಕಟವಾಗಿದೆ.
No comments:
Post a Comment