Tuesday, March 14, 2023

ಕವಿಗೆ ಕವಿ ಮಣಿವನ್‌ ೬: ಗಳಗನಾಥರಿಗೆ


 


ಕನ್ನಡದ ನುಡಿವೆಣ್ಣು ಕಬ್ಬದುಡಿಗೆಯ ತೊಟ್ಟು 

ಗಂಭೀರ ಗಮನದಲ್ಲಿ ಪಂಡಿತರ ಕೋಲೂರಿ 

ರಾಜವೈಖರಿಯಲ್ಲಿ ಮಂದ ಹೆಜ್ಜೆಗಳಿಟ್ಟು 

ಪಾಮರರ ಕಡೆಗಣಿಸಿ ಆಕಾಶಕುಸುಮಗಳ 

ಕಂಪನಾಘ್ರಾಣಿಸುತ ಕಲ್ಪವೃಕ್ಷದ ಹಣ್ಣ 

ಸವಿಸೊದೆಯ ಸೊಗಕೆಂದು ಬಾಯಿಚಪ್ಪರಿಸುತ್ತ 

ಸಗ್ಗಗಭಿಮುಖವಾಗಿ ಪಯಣ ಹೊರಟಿರುವಾಗ 

ಆಕೆಯನೆ ಕೆಣಕಿದಿರಿ ಗಳಗನಾಥರೆ ! ನೀವು.


ಉಭಯಭಾಷಾ ಪ್ರೌಢಸಾಮ್ರಾಜ್ಞತಾನಿಂದು

ರನ್ನ ಪೀಠವ ತೊರೆದು ಸಾಮಾನ್ಯರೆದೆಯಲ್ಲಿ 

ಸಲೆ ಮೆರೆದು ನಿಂತಿಹುದ ನಿಚ್ಚಳದಿ ಕಂಡಾಗ 

ನಿಮ್ಮ ಸೇವೆಯ ಮರೆದು ಬಾಳುವನೆ ಕನ್ನಡಿಗ? 

ನಿಮ್ಮ ಗದ್ಯದ ಶೈಲಿ ಕನ್ನಡದ ಜನಕಿತ್ತ 

ದಿವ್ಯ ಕಾಣಿಕೆಯಾಯ್ತು; ಹೆಸರು ಶಾಸನವಾಯ್ತು.



ಕನ್ನಡ ಕಾದಂಬರಿ ಪಿತಾಮಹ ಗಳಗನಾಥ (ವೆಂಕಟೇಶ ತಿರಕೋಕುಲಕರ್ಣಿ) ಅವರನ್ನು ಕುರಿತು ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ ಅವರು 1946ರ ಮಾರ್ಚ್‌ 15ರಂದು ಬರೆದಿದ್ದ ಕವಿತೆ ’ಗಳಗನಾಥರಿಗೆ’. ಈ ಕವಿತೆಯು ಧಾರವಾಡದ ವಿದ್ಯಾವರ್ಧಕ ಸಂಘವು ಪ್ರಕಟಿಸಿದ್ದ (1945) ’ಗಳಗನಾಥ’ ಪುಸ್ತಕದಲ್ಲಿ ಪ್ರಕಟವಾಗಿದೆ.


No comments: