ತಮ್ಮ ನೆನೆವ!
ಕಲ್ಲು-ಕಾಗದ-ಕಡತಗಳಲ್ಲಿ ಕಾಲನ ಕಾಲು
ಸಿಕ್ಕು ತೊಳಲಾಡುವಲಿ ಕುಣಿಕೆ ಬಿಡಿಸಿದಿರಣ್ಣ !
ಕರುವನಾಡಿಸಿದಂತೆ-ಅದನು ಕುಣಿಸಾಡಿದಿರಿ
ತಣಿದಿರಿ, ನೀವು ತಣಿಸಿದಿರಿ ಹನಿಸಿದಕಣ್ಣ.
ವೀರಚಿಂತಕ, ನಿಮ್ಮ ಧ್ಯಾನ ಬುದ್ಧಿಗೆ ಗಮ್ಯ
ನಿಮಗೆ ನೀವೇ ಪೂರ್ವಪಕ್ಷ, ಅಕ್ಷರ-ರಮ್ಯ.
ನಡುಹಾದಿಯಲ್ಲಿ ಬಿಡಬಹುದೆ ಜೋಗಿಯಕಂತೆ-?
ಕನ್ನಡಕೆ ಬರಬಹುದು-ಮತ್ತೆ, ನೀವೂ ಅಂತೆ-
ಪೈಗೆ ಪೈ ಲೆಕ್ಕ ಒಪ್ಪಿಸಿದಿರಾ? ಗೋವಿಂದ
ಒಪ್ಪಿದನೆನಾ ನೆನೆವೆ ಕಸ್ತೂರಿ, ಜವ್ವಾದಿ
ಹೊರಗೆ-ಹೊಗೆ ಬೂದಿ, ಒಳಗೊಳಗೆ ಅಗ್ನಿಯ ಹಾದಿ
ನಿಮ್ಮ ಜಿಜ್ಞಾಸೆಗೆಲ್ಲಿದೆ ಮುಗಿವು? ಪದಕಾದಿ?
ಹರಿಸಿದಿರಿ ತರುಣರನು, ಆ ಅಸೂಯೆಯೆದಗ್ಧ-
ನೀವು ಕಾಲ ಜ್ಞಾನಿ ಮುಗ್ಧ, ಅಕ್ಕರಿಗ, ವಿದಗ್ಧ !
ಗೋವಿಂದ ಪೈ ಅವರನ್ನು ಕುರಿತು ಅಂಬಿಕಾತನಯದತ್ತ ರಚಿಸಿದ ಕವಿತೆ. ಪೈ ಸಂಸ್ಮರಣ ಗ್ರಂಥ ’ದೀವಿಗೆ’ಯಲ್ಲಿ ಪ್ರಕಟವಾಗಿದೆ.
No comments:
Post a Comment