ಶ್ರೀಕೃಷ್ಣ ಸ್ಮರಣೆ
1
ಬೇಳೆ ಹುಳಿ ವಾಸನೆಯ ಹುಡುಗಿಯರ
ಮನ ಕೆಡಿಸಿ ಮತ್ಸಗಂಧಿಯರ ಮಾಡ
ಬಯಸಿದ ಬೆವರ ವಾಸನೆಯ ಹುಡುಗ
ಕೊನೆಗೆ ಮಣ್ಣಲ್ಲಿ ಒಂದಾಗಿ
ನಿನ್ನ ಗೋರಿಯ ಮೇಲೆ ಸಸಿ ಹುಟ್ಟಿ
ಅವರ ತುರುಬಿಗೆ ಹೂವಾದವು
ಹೂವ ಸುಗಂಧವೇ ಬೇರೆ.
2
ವರ್ಣಗಳಲ್ಲಿ ಭೇದ ಕಂಡು ಕನಲಿದ ಹುಡುಗ
ಎಲ್ಲ ಬಣ್ಣಗಳ ಕಲಸಿ ಒಂದು ಮಾಡುವೆನೆಂದ
ಕಪ್ಪು ಕತ್ತಲೆ ಸೀಳಿ ಬೆಳಕು ಮೂಡುವ ಮೊದಲು
ಕಾಡು ಹಾದಿ ತಿಳಿಯದೆ ಬಳಲಿದ
ಕಂದು ಬಣ್ಣದ ಕುದುರೆ ಏರಿ ಮಾಯವಾದ
ಖುರ ಪುಟದ ಪ್ರತಿಧ್ವನಿ ಮಾತ್ರ ಸ್ಪಷ್ಟ.
3
ಹೊತ್ತು ಮುಳುಗಿದ ಮೇಲೆ
ಕಾಡಿನ ಗೀಜಗನ ಗೂಡಲ್ಲಿ
ಕೊಳಲುಲಿತ
ಕಣ್ಮರೆಯಾದ ಕೃಷ್ಣನ ಶೇಷ.
4
ಭಾಗವತರಿಗೆ ಪ್ರೀತಿ ಬಾಲಕೃಷ್ಣನ ಲೀಲೆ
ಗೋಕುಲದ ಹುಡುಗಿಯರ ಕಣ್ಣು ಸುಂದರಾಂಗನ ಮೇಲೆ
ಆಸಕ್ತರಿಗೆ ಗೀತೋಪದೇಶದ ಮಾಲೆ
ಸಾವು ಕರೆದಾಗ ಬಿಟ್ಟು ಹೊರಟವನ ಕಂಡು
ಎಲ್ಲರೆದೆಯಲ್ಲಿ ಮರುಕದ ಜಲಧಾರೆ.
ಆಲನಹಳ್ಳಿ ಕೃಷ್ಣ ಕುರಿತು ಪ್ರತಿಭಾ ನಂದಕುಮಾರ್ ಅವರು ರಚಿಸಿದ ಕವಿತೆ. ಇದು ಡಿ.ಎಸ್. ನಾಗಭೂಷಣ ಮತ್ತು ರಾಘವೇಂದ್ರ ಪಾಟೀಲ ಸಂಪಾದಿಸಿದ ’ಕಾಡಿನ ಹುಡುಗ ಕೃಷ್ಣ’ (1990) ಸಂಸ್ಮರಣ ಸಂಪುಟದಲ್ಲಿದೆ.
No comments:
Post a Comment